ಕನ್ನಡದ ಕಿರುತೆರೆ ಜಗತ್ತಿನಲ್ಲಿ ಎಂ.ಡಿಕೌಶಿಕ್ ಅವರದ್ದು ಬಲು ದೊಡ್ಡ ಹೆಸರು. ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಮನಸೆಳೆಯುವಂತೆ ನಟಿಸುತ್ತಾ ಜನರ ಮನಸಿಗೆ ಹತ್ತಿರಾಗಿ ಮನೆಮಾತಾಗಿರುವ ಕೌಶಿಕ್ ಇದೀಗ ಹಿರಿತೆರೆಯತ್ತ ಗಮನಹರಿಸಿ ಹೊಸಾ ಪ್ರಯತ್ನವೊಂದಕ್ಕೆ ಕೈಹಾಕಿದ್ದಾರೆ. ‘ಸಂಜೆಯಲ್ಲಿ ಅರಳಿದ ಹೂವು ಎಂಬ ಚಿತ್ರದ ಮೂಲಕ ಹಿರಿತೆರೆಯಲ್ಲಿ ನಿರ್ದೇಶಕರಾಗಿ ಮಿಂಚಲು ಅಣಿಯಾಗಿದ್ದಾರೆ.
ಗಮನ ಸೆಳೆಯುವಂಥಾ, ಹೊಸತನ ಹೊಮ್ಮಿಸುವಂಥಾ ‘ಸಂಜೆಯಲ್ಲಿ ಅರಳಿದ ಹೂವು ಚಿತ್ರಕ್ಕೆ ಬಸವೇಶ್ವರ ನಗರದ ಕೌಸ್ತುಭ ಹೌಸ್ನಲ್ಲಿ ಅದ್ದೂರಿಯಾಗಿಯೇ ಮುಹೂರ್ತ ಸಮಾರಂಭ ನೆರವೇರಿದೆ. ಇದೀಗಲೇ ಈ ಚಿತ್ರದ ಚಿತ್ರೀಕರಣಕ್ಕೂ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅಂದಹಾಗೆ ಈ ಚಿತ್ರದಲ್ಲಿ ಬಹುತೇಕ ವಿಶೇಷತೆಗಳೇ ತುಂಬಿ ತುಳುಕುತ್ತಿವೆ.
ಮೊದಲನೆಯದಾಗಿ ಈ ಚಿತ್ರಯದಲ್ಲಿ ಹಿರಿತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಯಾವ ಮುಖಗಳೂ ಕಾಣಿಸುವುದಿಲ್ಲ. ಯಾಕೆಂದರೆ ಕಿರುತೆರೆಯ ಪ್ರತಿಭಾವಂತರೇ ಇಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ. ಖ್ಯಾತ ಸಂಗೀತ ವಿಧ್ವಾನ್ ಆರ್.ಕೆ ಪದ್ಮನಾಭನ್ ಅವರೂ ಈ ಚಿತ್ರದ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಈ ಪಾತ್ರವೂ ಅವರ ನಿಜ ಜೀವನದ ವೃತ್ತಿ ವೃತ್ತಾಂತಕ್ಕೆ ಪೂರಕವಾಗಿರುವುದು ವಿಶೇಷ. ಇನ್ನು ಈ ಚಿತ್ರ ಪ್ರಖ್ಯಾತ ಕಾದಂಬರಿಕಾರರಾದ ಮಾಲತಿ ಶೆಟ್ಟಿಯವರ ಕಾದಂಬರಿ ಆಧಾರಿತ ಚಿತ್ರ ಎಂಬುದು ಮತ್ತೊಂದು ವಿಶೇಷ.
‘ಸಂಜೆಯಲ್ಲಿ ಅರಳಿದ ಹೂವು ಚಿತ್ರ ಲಕ್ಷ್ಮಿ ಆರ್ಟ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ನಾಗೇಶ್ವರ ರಾವ್ ಇದರ ನಿರ್ಮಾಪಕರು. ಕಿರುತೆರೆಯ ಸ್ಟಾರ್ ನಟ ನಟಿಯರಾದ ಜಯಶ್ರೀ, ನಾರಾಯಣಸ್ವಾಮಿ, ಮಾಲತಿ ಸರದೇಶಪಾಂಡೆ, ಮೇಘನಾ, ಶೀಲಾ, ಮಂಜುನಾಥ್ ಮುಂತಾದವರು ನಟಿಸಿದ್ದಾರೆ. ಮಾರುತಿ ಮಿರೇಜ್ಕರ್ ಅವರು ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಾಹಕರಾಗಿದ್ದಾರೆ.
ಕಿರುತೆರೆಯಲ್ಲಿ ವಿವಿಧ ಪಾತ್ರ ನಿರ್ವಹಿಸುತ್ತಲೇ ಎಲ್ಲಾ ವಿಭಾಗಗಳಲ್ಲಿಯೂ ಪಾಂಡಿತ್ಯ ಪಡೆದುಕೊಂಡಿರುವ ಎಂ.ಡಿ ಕೌಶಿಕ್ ಹಿರಿತೆರೆಯಲ್ಲಿಯೂ ಆಗಾಗ ಕಾಣಿಸಿಕೊಂಳ್ಳತ್ತಿದ್ದದ್ದುಂಟು. ಅವರೀಗ ‘ಸಂಜೆಯಲ್ಲಿ ಅರಳಿದ ಹೂವು ಮೂಲಕ ಗ್ರ್ಯಾಂಡ್ ಆಗಿಯೇ ಹಿರಿತೆರೆಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.